ಮಹಾರಾಷ್ಟ್ರ : ಹೆತ್ತವರಿಂದಲೇ ಕಸದ ತಿಪ್ಪೆಗೆ ಎಸೆಯಲ್ಪಟ್ಟಿದ್ದ ಹೆಣ್ಣು ಮಗುವೊಂದು ಈಗ ಮಹಾರಾಷ್ಟ್ರದ ಲೋಕಸೇವಾ ಪರೀಕ್ಷೆ (ಎಂಪಿಎಸ್ಸಿ)ಯಲ್ಲಿ ಉತ್ತೀರ್ಣಳಾಗಿದ್ದಾಳೆ.
25 ವರ್ಷಗಳ ಹಿಂದೆ ಮಹಾರಾಷ್ಟ್ರದ ಜಲಗಾಂವ್ ರೈಲು ನಿಲ್ದಾಣದ ಕಸದ ತೊಟ್ಟಿಯಲ್ಲಿ ದೃಷ್ಟಿಮಾಂದ್ಯ ಹೆಣ್ಣುಮಗುವೊಂದು ಪತ್ತೆಯಾಗಿತ್ತು. ಈ ಮಗುವಿನ ಪೋಷಕರ ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಆಗ ನವಜಾತ ಶಿಶುವನ್ನು ಜಲಗಾಂವ್ ರಿಮಾಂಡ್ ಹೋಮ್ ನಲ್ಲಿರಿಸಿದ ಬಳಿಕ ಉತ್ತಮ ಸೌಲಭ್ಯವಿರುವ ಪರಾಟ್ ವಾಡ ಕಿವುಡ ಮತ್ತು ಅಂಧಮಕ್ಕಳ ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗಿತ್ತು.
ಮಗುವಿಗೆ ಮಾಲಾ ಪಾಪಲ್ಕರ್ ಎಂದು ನಾಮಕರಣ ಮಾಡಲಾಗಿತ್ತು. ಎರಡು ದಶಕಗಳ ಬಳಿಕ ಈ ಮಗು ಇದೀಗ ಮಹಾರಾಷ್ಟ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಮಹಾರಾಷ್ಟ್ರದ ಸಚಿವಾಲಯದಲ್ಲಿ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಮಾಲಾ ಅವರಿಗೆ ಮಾರ್ಗದರ್ಶಕರಾಗಿ ಹಾಗೂ ಪದ್ಮಪ್ರಶಸ್ತಿ ಪುರಸ್ಕೃತ ಶಂಕರಬಾಬಾ ಪಾಪಲ್ಕರ್ (81) ತಮ್ಮ ಸರ್ನೇಮ್ ನೀಡಿದ್ದರು. ಆಕೆಯ ಪ್ರತಿಭೆ ಗುರುತಿಸಿ ಎಲ್ಲಾ ರೀತಿಯಿಂದಲೂ ಪೋಷಿಸಿದರು. ಬ್ರೈಲ್ ಶಾಲೆಗೆ ಕಳುಹಿಸಿ, ದೃಷ್ಟಿಮಾಂದ್ಯ ಮಗು ವಿಶೇಷ ಸಾಧನೆ ಮಾಡಲು ಪ್ರೇರೇಪಿಸಿದರು. ನನ್ನನ್ನು ರಕ್ಷಿಸಲು ದೇವರು ದೇವದೂತರನ್ನು ಕಳುಹಿಸಿದ್ದಾರೆ. ನಾನು ಇಂದು ಈ ಸ್ಥಿತಿಗೆ ತಲುಪಲು ಶಂಕರಾಬಾಬಾ ನೆರವಾಗಿದ್ದಾರೆಂದು ಮಾಲಾ ಸಂತಸ ಹಂಚಿಕೊಂಡಿದ್ದಾರೆ. ಮುಂದೆ ಯುಪಿಎಸ್ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗುವುದು ನನ್ನ ಬಯಕೆ ಎಂದು ಹೇಳಿದ್ದಾರೆ.
ಶೈಕ್ಷಣಿಕ ಹೆಜ್ಜೆಗಳು : ಅಂಧಮಕ್ಕಳ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು. ಅಮರಾವತಿ ವಿವಿಯಿಂದ 2018ರಲ್ಲಿ ಪದವಿ ಹಾಗೂ ಸರಕಾರಿ ವಿದರ್ಭ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಹ್ಯುಮ್ಯಾನಿಟೀಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಬ್ರೈಲ್ ಲಿಪಿಯಲ್ಲಿ ಪರೀಕ್ಷೆ ಬರೆಯಲು ಬೇರೆಯವರ ನೆರವು ಪಡೆಯುತ್ತಿದ್ದರು. ಬಳಿಕ ಪ್ರೊ. ಪ್ರಕಾಶ್ ಟೋಪ್ಲೆ ಪಾಟೀಲ್ ಆಕೆಯನ್ನು ಶಿಕ್ಷಣಕ್ಕಾಗಿ ದತ್ತು ಪಡೆದರು ಎಂದು ಶಂಕರಬಾಬಾ ಹೇಳಿದ್ದಾರೆ. 2022 ಮತ್ತು 2023ರಲ್ಲಿ ತಹಶೀಲ್ದಾರ್ ಪರೀಕ್ಷೆ ಬರೆದ ಮಾಲಾ ಉತ್ತೀರ್ಣರಾಗಿ ರಲಿಲ್ಲ. ಇದೀಗ ಎಂಪಿಎಸ್ಸಿ ಕ್ಲರ್ಕ್ ಹುದ್ದೆ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದಾರೆ.