ಭಟ್ಕಳ : ತಾಲೂಕಿನ ಅಲ್ವೇಕೋಡಿಯ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯಲ್ಲಿ ಓದುತ್ತಿರುವ 156 ವಿದ್ಯಾರ್ಥಿಗಳಿಗೆ ಒಂದು ವರ್ಷ ಬೇಕಾಗುವಷ್ಟು ನೋಟಬುಕ್ ಶ್ರೀ ದುರ್ಗಾದೇವಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿತರಿಸಲಾಯಿತು.
ಶ್ರೀ ದುರ್ಗಾದೇವಿ ಚಾರಿಟೇಬಲ್ ಟ್ರಸ್ಟನ ಅಧ್ಯಕ್ಷರಾದ ತಿಮ್ಮಪ್ಪ ಹೊನ್ನಿಮನೆ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ನಾರಾಯಣ್ ದೈಮನೆ ಮಾತನಾಡಿ 2023-24ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪ್ರೌಢಶಾಲೆಯು ಪ್ರತಿ ಶತ ಫಲಿತಾಂಶ ತಂದಿರುವುದಕ್ಕೆ ಶ್ಲಾಘಿಸಿದರು. ಶಿಕ್ಷಕರ ಪರಿಶ್ರಮವನ್ನ ಕೊಂಡಾಡಿದರು. ಈ ಸಾಧನೆಗೆ ಮಾರ್ಗದರ್ಶಕರಾದ ಕ್ಷೇತ್ರ ಶಿಕ್ಷಣಾಧಿಕಾರಿ ವಿ ಡಿ ಮೊಗೇರ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ಗೌರವ ಸ್ವೀಕರಿಸಿ ಮಾತನಾಡಿದ ಬಿಇಓ ವಿ ಡಿ ಮೊಗೇರ ಮಾತನಾಡುತ್ತ, ಶಾಲೆಯ ಶಿಕ್ಷಕರ ಪರಿಶ್ರಮ ಮತ್ತು ಆಡಳಿತ ಮಂಡಳಿಯ ಚಾರಿಟೇಬಲ್ ಟ್ರಸ್ಟ್ ಹಾಗೂ ದೇವಸ್ಥಾನದ ಸಂಪೂರ್ಣ ಬೆಂಬಲದಿಂದಾಗಿ ಉತ್ತಮ ಫಲಿತಾಂಶ ಹಾಗೂ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಇದರ ಸಂಪೂರ್ಣ ಸದುಪಯೋಗವಾಗಲು ಪಾಲಕರು ಹಾಗೂ ಪೋಷಕರ ಜವಾಬ್ದಾರಿ ಬಹಳಷ್ಟು ಇದೆ ಎಂದು ಕಿವಿ ಮಾತು ಹೇಳಿದರು.
ವೇದಿಕೆಯಲ್ಲಿ ಶಿರಾಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಭಾಸ್ಕರ್ ದೈಮನೆ, ಶಾಲಾ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳಾದ ಚಂದ್ರಕಾಂತ್ ಮೊಗೇರ್, ಭಾಸ್ಕರ್ ಮೊಗೇರ್, ಮಾದೇವ ಮೊಗೇರ್ ಹಾಗೂ ಶಾಲಾ ಶಿಕ್ಷಕ ಸಿಬ್ಬಂದಿಗಳ ಮೂಲಕ ನೋಟ್ ಬುಕ್ ವಿತರಿಸಿ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಯಿತು.
ಶಾಲಾ ವಿದ್ಯಾರ್ಥಿನಿಯರು ಆರಂಭದಲ್ಲಿ ಪ್ರಾರ್ಥಿಸಿದರು. ಪ್ರೌಢಶಾಲೆಯ ಮುಖ್ಯಧ್ಯಾಪಕ ಕೆ ಬಿ ಮಡಿವಾಳ ಸ್ವಾಗತಿಸಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಶ್ರೀ ದುರ್ಗಾ ದೇವಿ ಚಾರಿಟೇಬಲ್ ಟ್ರಸ್ಟ್ ನಿಂದ ಶಾಲೆಗೆ ಕೊಡಲ್ಪಟ್ಟ ಎಲ್ಲಾ ಸೌಲಭ್ಯಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.