ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar): ತಾಲೂಕಿನ ಮತ್ತೀಘಟ್ಟಾ ಕೆಳಗಿನಕೇರಿ ರಸ್ತೆ ಸಮಸ್ಯೆಯನ್ನು  ಶೀಘ್ರವಾಗಿ ಪರಿಹರಿಸುವಂತೆ ಆಗ್ರಹಿಸಿ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಮಾಡುತ್ತಿದ್ದ ಅಹೋರಾತ್ರಿ ಧರಣಿಗೆ ಜಿಲ್ಲಾಡಳಿತ ಸ್ಪಂದಿಸಿದೆ.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಜಿಲ್ಲಾಧಿಕಾರಿಗಳಿಗೆ ಸೋಮವಾರ ದೂರವಾಣಿ ಮುಖಾಂತರ ಖಡಕ್ ಸೂಚನೆ ನೀಡಿದ್ದರ ಹಿನ್ನಲೆಯಲ್ಲಿ, ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ಜಿಲ್ಲಾಧಿಕಾರಿಗಳು ತಮ್ಮ ಪರಮಾಧಿಕಾರವನ್ನು ಬಳಸಿಕೊಂಡು ಸಂಬಂಧಿಸಿದ ಕಾಮಗಾರಿ ಆರಂಭಿಸುವಂತೆ ವಿಶೇಷ ಆದೇಶ ಮಾಡಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿಗಳ ಕಛೇರಿ ಎದುರಿನಲ್ಲಿ ಬೆಳಿಗ್ಗೆಯಿಂದ ಆರಂಭಿಸಿದ್ದ ಅಹೋರಾತ್ರಿ ಧರಣಿಯನ್ನು ಅಂತ್ಯಗೊಳಿಸಲಾಗಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ತಿಳಿಸಿದ್ದಾರೆ.

ಮತ್ತಿಘಟ್ಟದ ಕೆಳಗಿನಕೇರಿಯ ಜನರು ಹಿಂದಿನ ವರ್ಷ ನಡೆದಂತಹ ಭೂ ಕುಸಿತದಿಂದಾಗಿ ರಸ್ತೆಯನ್ನು ಕಳೆದುಕೊಂಡು ಕಷ್ಟ ಅನುಭವಿಸುತ್ತಿದ್ದರೂ, ಈ ವಿಷಯದ ಕುರಿತು ಶಾಸಕರು ಬಂದು ಸ್ಥಳ ಪರಿಶೀಲನೆ ಮಾಡದೇ ಹಾಗೂ ಪರಿಹಾರವನ್ನು ನೀಡದೆ ಇರುವುದನ್ನು ಖಂಡಿಸಿ ಮತ್ತಿಘಟ್ಟದ ಕೆಳಗಿನಕೇರಿಯ ಗ್ರಾಮಸ್ಥರ ಜೊತೆಗೂಡಿ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಕಾರವಾರದ ಡಿಸಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಗಿತ್ತು.

ಈ ವೇಳೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತುತ ವಿದ್ಯಮಾನಗಳನ್ನು ವಿವರಿಸಿ, ಮನವರಿಕೆ ಮಾಡಲಾಯಿತು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಕೂಡಲೇ ಅಧಿಕಾರಿಗಳನ್ನು ಕರೆಸಿ ಮಾತನಾಡಿದರು. ಇದಕ್ಕೆ ಜಗ್ಗದ ಪ್ರತಿಭಟನಾಕಾರರು ಸಮಸ್ಯೆಗೆ ಅಂತಿಮ ಪರಿಹಾರ ದೊರೆಯುವವರೆಗೂ ಅಹೋರಾತ್ರಿ ಪ್ರತಿಭಟನೆ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದ್ದರು. ಅಂತಿಮವಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರ ಹಿನ್ನಲೆಯಲ್ಲಿ, ಜಿಲ್ಲಾಧಿಕಾರಿಗಳ ವಿಶೇಷ ಆದೇಶದ ಹಿನ್ನಲೆಯಲ್ಲಿ ಧರಣಿಯನ್ನು ಅಂತ್ಯಗೊಳಿಸಲಾಯಿತು.

ಜಿಲ್ಲಾಧಿಕಾರಿಗಳ ಆದೇಶದ ಪತ್ರದಲ್ಲೆನಿದೆ ?
ಶಿರಸಿ-ಅಂಕೋಲಾ ತಾಲ್ಲೂಕಿನ ಗಡಿ ಪ್ರದೇಶ ಮತ್ತಿಘಟ್ಟ ಕೆಳಗಿನಕೇರಿ ಸಮೀಪದ ಕುಗ್ರಾಮಗಳಾದ ಮಾಡನಮನೆ, ಉಂಬಳಕೇರಿ, ನರಸೇಬೈಲ್, ಗುಂಡಪ್ಪ, ಸೇರಿದಂತೆ ಆರಕ್ಕೂ ಅಧಿಕ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ 2024 ರಲ್ಲಿ ಮಳೆಯಿಂದ ಭೂಕುಸಿತವಾಗಿ ಸಂಪರ್ಕವೇ ಕಡಿತಗೊಂಡಿದ್ದು, ಮುಂಬರುವ ಮಳೆಗಾಲದಲ್ಲಿ ಸದ್ರಿ ರಸ್ತೆಯಲ್ಲಿ ಹೆಚ್ಚಿನ ಭೂಕುಸಿತವಾಗುವ ಸಾಧ್ಯತೆಯಿರುವ ಬಗ್ಗೆ ಮತ್ತಿಘಟ್ಟ ಕೆಳಗಿನಕೇರಿ ಸುತ್ತಮುತ್ತಲಿನ ಗ್ರಾಮಸ್ಥರು ರಸ್ತೆ ದುರಸ್ಥಿ ಪಡಿಸುವ ಬಗ್ಗೆ ಕೋರಿಕೆ ಸಲ್ಲಿಸಿರುತ್ತಾರೆ. ಮುಂಬರುವ ಮಳೆಗಾಲದಲ್ಲಿ ಪ್ರಕೃತಿ ವಿಕೋಪದಿಂದ ಸದ್ರಿ ರಸ್ತೆಯು ಭೂಕುಸಿತವಾಗಿ ಸಾರ್ವಜನಿಕ ಸಂಪರ್ಕ ಕಡಿತಗೊಂಡು ಸಾರ್ವಜನಿಕ ಜನ ಜೀವನಕ್ಕೆ ಹಾನಿಯಾಗುವ ಸಾಧ್ಯತೆಯಿರುವುದರಿಂದ ಮುಂಗಾರಿನ ಪೂರ್ವದಲ್ಲಿಯೇ ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ಇಲಾಖಾ ವತಿಯಿಂದ ಕಾಮಗಾರಿ ಕೈಗೊಂಡು ಸಾರ್ವಜನಿಕ ಜೀವನಕ್ಕೆ ಹಾಗೂ ಸಾರ್ವಜನಿಕ ಸಂಪರ್ಕಕ್ಕೆ ವ್ಯತ್ಯಯವಾಗದಂತೆ ಸದ್ರಿ ಕಾಮಗಾರಿಯನ್ನು ಪೂರ್ಣಗೊಳಿಸಲು ಆದೇಶಿಸಿದೆ. ಈ ಬಗ್ಗೆ ಸದ್ರಿ ವ್ಯಾಪ್ತಿಯ ಅರಣ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಕಾಮಗಾರಿಯನ್ನು ಕೈಗೊಳ್ಳತಕ್ಕದ್ದು ಹೆಚ್ಚಿನ ಕಾಮಗಾರಿಗೆ ತಗಲುವ ಅನುದಾನವನ್ನು MPLADS/KLLADS ರಡಿ 2025-26 ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಸದ್ರಿ ಕಾಮಗಾರಿಯನ್ನು ಅಳವಡಿಸಿ ಪೂರ್ಣಗೊಳಿಸಲು ಸೂಚಿಸಿದೆ. ಈ ಆದೇಶದ ಅನುಸರಣೆಯನ್ನು ಶಿರಸಿಯ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯ‌ರ್ ಖಚಿತಪಡಿಸಿಕೊಳ್ಳಬೇಕು. ಮೇಲಿನ ಆದೇಶವನ್ನು ಪಾಲಿಸಲು ಯಾವುದೇ ಅಧಿಕಾರಿಯಿಂದ ಯಾವುದೇ ಅಡಚಣೆ, ಪ್ರತಿರೋಧ ಅಥವಾ ನಿರಾಕರಣೆ ಉಂಟಾದರೆ ವಿಪತ್ತು ನಿರ್ವಹಣಾ ಕಾಯ್ದೆ, 2005 ರ ಸೆಕ್ಷನ್ 51 ರಿಂದ 60 ರ ಅಡಿಯಲ್ಲಿ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ. ಈ ಆದೇಶವನ್ನು ಏಪ್ರಿಲ್ 28, 2025 ರಂದು ನನ್ನ ಸಹಿ ಮತ್ತು ಮೊಹರು ಅಡಿಯಲ್ಲಿ ಹೊರಡಿಸಲಾಗಿದೆ ಮತ್ತು ತಕ್ಷಣದಿಂದ ಜಾರಿಗೆ ಬರುತ್ತದೆ ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ಸೂಚಿಸಿದ್ದಾರೆ.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ದೂರವಾಣಿ ಮುಖಾಂತರ ಜಿಲ್ಲಾಧಿಕಾರಿಗಳ ಬಳಿ ಮಾತನಾಡಿ, ಈ ಕೂಡಲೇ ಸಂಬಂಧಪಟ್ಟ ಇಲಾಖೆಯೊಡನೆ ಮಾತನಾಡಿ, ತುರ್ತಾಗಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ತುರ್ತು ಆದೇಶ ಕೈಗೊಂಡಿದ್ದು, ಮತ್ತೀಘಟ್ಟ ಗ್ರಾಮಸ್ಥರಿಗೆ ಸಮಾಧಾನ ತಂದಿದ್ದು, ಈ ನಿಟ್ಟಿನಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಸಮಸ್ತ ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಧರಣಿಯಲ್ಲಿ ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಬಳ್ಳಾರಿ, ಊರಿನ ಪ್ರಮುಖರಾದ ನಾರಾಯಣ ಹೆಗಡೆ ವಿನಯ್ ಹೆಗಡೆ, ಜಯಭಾರತಿ ಭಟ್, ನಾಗೇಶ ಸಿದ್ದಿ, ದಾಮೋದರ ಸಿದ್ದಿ, ಲತಾ ಶಂಕರ ಸಿದ್ದಿ, ರೇಣುಕಾ ಗೋಪಾಲ್ ಸಿದ್ದಿ, ದತ್ತಾತ್ರೇಯ ಭಟ್, ಗಣಪತಿ ನಾಯ್ಕ್ , ನಾಗರಾಜ್ ಸುಬ್ರಾಯ ಹೆಗಡೆ, ವಿಶ್ವೇಶ್ವರ ಗಣಪತಿ ಹೆಗಡೆ ಇದ್ದರು.

ಕಾಗೇರಿಗೆಅನಂತಮೂರ್ತಿಹೆಗಡೆಅಭಿನಂದನೆ:
ಸದಾ ಜನತೆಯ ಕಷ್ಟಕ್ಕೆ ಸ್ಪಂದಿಸುವ ನಾಯಕತ್ವದ ಕಾರಣಕ್ಕೆ ಕಾಗೇರಿಯವರು ಈ ಸ್ಥಾನಕ್ಕೆ ಏರಿದ್ದಾರೆ. ಕಷ್ಟದಲ್ಲಿರುವ ಹಿಂದುಳಿದ ಸಮಾಜದ ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ನಮ್ಮೊಡನೆ ಅವರು ಜೊತೆಯಾಗಿ ನಿಂತಿದ್ದು ನಮಗೆ ಧೈರ್ಯ ತಂದಿದೆ. ಮತ್ತೀಘಟ್ಟ ಕೆಳಗಿನಕೇರಿ ಸಮಸ್ತ ಗ್ರಾಮಸ್ಥರ ಪರವಾಗಿ ಕಾಗೇರಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನು ಓದಿ: 10 ಸಾವಿರ ರೂ ಚಾಲೆಂಜ್ ಗೆ 5 ಬಾಟಲಿ ಮದ್ಯ ಸೇವಿಸಿದ ವ್ಯಕ್ತಿ ಸಾವು.

ಯುದ್ಧ ಭೀತಿ. ಪಾಕಿಸ್ತಾನದ ಸಾವಿರಾರು ಸಂಖ್ಯೆಯ ಸೈನಿಕರು, ಸೇನಾಧಿಕಾರಿಗಳ ರಾಜೀನಾಮೆ.

ಕಾಶ್ಮೀರ ಘಟನೆ ಹಿನ್ನಲೆಯಲ್ಲಿ ಸಂಗೀತ ಕಾರ್ಯಕ್ರಮ ರದ್ದುಗೊಳಿಸಿದ ಗಾಯಕರು. ಕರಾವಳಿ ಉತ್ಸವದ ಕಥೆ ಏನು?