ಬೆಂಗಳೂರು(BANGLORE) : ಕಳೆದ ಒಂದು ದಶಕದ ಹಿಂದೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಾ(Gangavati Taluk) ಮರಕುಂಬಿ ಗ್ರಾಮದಲ್ಲಿ (Marakambi Village) ಜಾತಿ ವೈಷಮ್ಯ ಉಲ್ಬಣಗೊಂಡು ದಲಿತರು ಹಾಗು ದಲಿತ ಕೇರಿಯ ಮೇಲೆ ಸಾಮೂಹಿಕ ಹಲ್ಲೆ ಹಾಗು ದಲಿತರ ಗುಡಿಸಲಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂದಿಸಿ, ಸುದೀರ್ಘ 10 ವರ್ಷಗಳ ಕಾಲ ವಿಚಾರಣೆಯನ್ನು ನಡೆಸಿದ ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಲಯವು   ಅಪರಾಧಿಗಳಿಗೆ ವಿಧಿಸಿದ ಶಿಕ್ಷೆಯು ಚರಿತ್ರಾರ್ಹವಾದುದು ಎಂದು ಸಿಪಿಐಎಂ ರಾಜ್ಯ ಸಮಿತಿ(CPIM State Comittee) ಶ್ಲಾಘಿಸಿದೆ.

ಪ್ರಕರಣದಲ್ಲಿ 98 ಜನರಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ಹಾಗು ಮುವರಿಗೆ ಐದು ವರ್ಷಗಳ ಜೈಲು ಶಿಕ್ಷೆ  ಮತ್ತು ದಂಡ ವಿಧಿಸಿದೆ.

ಇದು ರಾಜ್ಯದ ಎಲ್ಲ ದಲಿತರಿಗೂ, ಸಾಮಾಜಿಕ ತಾರತಮ್ಯದ ವಿರುದ್ದ ಧ್ವನಿ ಎತ್ತುತ್ತಿರುವ ಎಲ್ಲ  ಎಡ ಮತ್ತು ಪ್ರಗತಿಪರ ಶಕ್ತಿಗಳಿಗೆ ದೊರೆತ ಜಯವಾಗಿದೆ. ಅಲ್ಲದೆ ಇದು ಈ ಶಕ್ತಿಗಳಿಗೆ ಮತ್ತಷ್ಠು ಬಲವನ್ನು ತಂದು ಕೊಟ್ಡಿದೆಯೆಂದು ಹಾಗು ಜಾತಿ ದೌರ್ಜನ್ಯದಲ್ಲಿ ತೊಡಗಿರುವ ಪುಂಡರಿಗೆ ಎಚ್ಚರಿಕೆಯ ಘಂಟೆಯಾಗಿದೆ ಎಂದು ಸಿಪಿಐಎಂ ವಿಶ್ಲೇಷಿಸಿದೆ.

ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಅದರಲ್ಲೂ ಮುಖ್ಯವಾಗಿ ಸಿಪಿಐಎಂ   ಕೊಪ್ಪಳ ಜಿಲ್ಲೆಯಲ್ಲಿ (Koppal District) ದಲಿತರು, ಮಹಿಳೆಯರು, ಕೂಲಿಕಾರರು, ರೈತರು ಹಾಗು ಕಾರ್ಮಿಕರ ನಡುವೆ ಅವರ ಶೋಷಣೆಯ ವಿರುದ್ದ ಚಳುವಳಿ ಹಾಗು ಜಾಗೃತಿ ಮೂಡಿಸುತ್ತಿದ್ದದರ ಭಾಗವಾಗಿ ಈ ಪ್ರದೇಶದ ಭೂಮಾಲಕ ಪಟ್ಟಭದ್ರ ಹಿತಾಸಕ್ತಿಗಳು ಅದರ ವಿರುದ್ದ ಕೆಂಗಣ್ಣು ಬೀರಿದ್ದರು.

ಈ ದೌರ್ಜನ್ಯದ ಪ್ರಕರಣದಲ್ಲಿ  ದಲಿತರ ರಕ್ಷಣೆಗೆ ನಿಂತ ಸಿಪಿಐಎಂ ಪಕ್ಷದ ಅಂದಿನ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ.ಗಂಗಾಧರ  ಸ್ವಾಮಿ ಹಾಗು ಅವರ ಶ್ರೀಮತಿಯು ಸೇರಿದಂತೆ ಇತರೆ ನಮ್ಮ ಪಕ್ಷದ ಮುಖಂಡರು, ಸದಸ್ಯರ ಮೇಲೂ ಹಲ್ಲೆ ನಡೆಸಲಾಗಿತ್ತು. ಪಕ್ಷದ ಬೆಂಬಲಿಗ ಹಾಗು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರಾಗಿದ್ದ  ವೀರೇಶಪ್ಪ ಪ್ರಮುಖ ಸಾಕ್ಷಿಯಾಗಿದ್ದು ಕೊಲ್ಲಲ್ಪಟ್ಟನು.

ಸಿಪಿಐಎಂ ಜಿಲ್ಲಾ ಸಮಿತಿ ನೇತೃತ್ವದಲ್ಲಿ, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ, ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ, ದಲಿತ ಹಕ್ಕುಗಳ ಸಮಿತಿ – ಕರ್ನಾಟಕ, ಭಾರತ ವಿದ್ಯಾರ್ಥಿ ಫೆಡರೇಷನ್ ಗಳು ಜಂಟಿಯಾಗಿ ದಲಿತರ ರಕ್ಷಣೆಗೆ ಹಾಗು ನ್ಯಾಯಕ್ಕಾಗಿ ವ್ಯಾಪಕ ಚಳುವಳಿಯಲ್ಲಿ ತೊಡಗಿದ್ದವು.
ಸಿಪಿಐಎಂ ಪಕ್ಷದ ಪಾಲಿಟ್ ಬ್ಯುರೋ ಸದಸ್ಯರು ಹಾಗು ಮಾಜಿ ಶಿಕ್ಷಣ ಸಚಿವರಾಗಿದ್ದ ಕಾಂ.ಎಂ.ಎ.ಬೇಬಿ ಮತ್ತು ದಲಿತ ಶೋಷಣ ಮುಕ್ತಿ ಮಂಚನ ಅಖಿಲ ಭಾರತ ಅಧ್ಯಕ್ಷರು ಮತ್ತು ಕೇರಳದ ಸಮಾಜ ಕಲ್ಯಾಣ ಸಚಿವರಾಗಿದ್ದ ಕಾಂ.ರಾಧಾ ಕೃಷ್ಣನ್, ಅಂದಿನ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಕಾಂ.ಜಿ.ವಿ.ಶ್ರೀರಾಮರೆಡ್ಡಿ ಮುಂತಾದ ನಾಯಕರು ಗ್ರಾಮಕ್ಕೆ ಬೇಟಿ ನೀಡಿ ಭಯ ಭೀತ ದಲಿತ ಕುಟುಂಬಗಳಿಗೆ ಧೈರ್ಯ ತುಂಬಿದರಲ್ಲದೆ,  ಗ್ರಾಮದಲ್ಲಿ ಶಾಂತಿ ಹಾಗು ದಲಿತರ ರಕ್ಷಣೆಗಾಗಿ ಮತ್ತು ದೌರ್ಜನ್ಯಕೋರರನ್ನು ಬಂಧಿಸಿ ಶಿಕ್ಷೆಗೊಳಪಡಿಸಲು  ಗಂಗಾವತಿ ಠಾಣೆಯ ಮುಂದೆ ಸುರಿಯುವ ಮಳೆಯ ನಡುವೆಯು ನಡೆಸಲಾದ ಸಾವಿರಾರು ಜನರ ಪ್ರತಿಭಟನೆಯ ನೇತೃತ್ವ ವಹಿಸಿ, ಬೀದಿಯಲ್ಲಿ ಕುಳಿತು ಸಾಮೂಹಿಕ ಧರಣಿ ನಡೆಸಿದ್ದರು. ಈ ಕಾರಣಕ್ಕಾಗಿ ನಂತರ ಇವರು ಸೇರಿದಂತೆ ಹತ್ತಾರು ಮುಖಂಡರ ಮೇಲೆ ಪೋಲಿಸರು  ಮೊಕದ್ದಮೆಯನ್ನು ದಾಖಲಿಸಿದ್ದರು.

ಮಾತ್ರವಲ್ಲಾ ಈ ಎಲ್ಲ ಸಂಘಟನೆಗಳ ನೇತೃತ್ವದಲ್ಲಿ ಮರಕುಂಬಿಯಿಂದ ಬೆಂಗಳೂರಿಗೆ(Marakumbi to Banglore) ನ್ಯಾಯ ಕೋರಿ ನೂರಾರು ಜನ ಮಹಿಳೆಯರು ಸೇರಿದ ಬೃಹತ್ ಪಾದಯಾತ್ರೆಯನ್ನು ನಡೆಸಲಾಗಿತ್ತು ಎಂದು ಸಿಪಿಐಎಂ ನೆನಪಿಸಿದೆ.

ದಲಿತರ ಜೊತೆ ಧೈರ್ಯವಾಗಿ ನಿಂತು ನ್ಯಾಯ ಕೊಡಿಸಲು ಮುಂದಾದ ಸಿಪಿಐಎಂ ಕೊಪ್ಪಳ ಜಿಲ್ಲಾ ಸಮಿತಿ ಮತ್ತಿತರೆ ಸಂಘಗಳ ನಾಯಕತ್ವವನ್ನು ರಾಜ್ಯ ಸಮಿತಿ ಅಭಿನಂದಿಸಿದೆ.

ಅಪರಾಧಿಗಳ ಕುಟುಂಬ ಸದಸ್ಯರ ನೋವಿಗೆ ಸಿಪಿಐಎಂ ಮರುಕ : ಸಿಪಿಐಎಂ ಎಲ್ಲ ದಮನಿತ ಹಾಗು ಶೋಷಿತ ಸಮುದಾಯಗಳ ಜಾಗೃತಿಗಾಗಿ ಮತ್ತು ಮಾನವ ಘನತೆಗಾಗಿ ಶೋಷಕ ಸಾಮಾಜಿಕ ವ್ಯವಸ್ಥೆಯ ವಿರುದ್ದ ಹೋರಾಟ ನಡೆಸುತ್ತದೆಯೇ ಹೊರತು ವ್ಯಕ್ತಿಗಳ ವಿರುದ್ದವಲ್ಲವೆಂಬುದನ್ನು ಸ್ಪಷ್ಠ ಪಡಿಸಿದೆ.

ದಲಿತರ ಮೇಲೆ ಜಾತಿ ದ್ವೇಷದಿಂದ ಸಾಮೂಹಿಕ ಹಲ್ಲೆ ನಡೆಸಿದಾಗ ದಲಿತ ಕುಟುಂಬಗಳು ಅನುಭವಿಸಿದ ಜೀವ ಭಯವನ್ನು ಅರ್ಥೈಸಿಕೊಳ್ಳಬೇಕು ಮತ್ತು ಎಲ್ಲರು ಜಾತಿ ವೈಷಮ್ಯ ಬಿಟ್ಟು  ಸಾಮರಸ್ಯದಿಂದ ಬಾಳಲು ಸಿಪಿಐಎಂ ಮನವಿ ಮಾಡಿದೆ. ಖಂಡಿತಾ ಸಂಕಷ್ಟದಲ್ಲಿರುವ ಎಲ್ಲ ಕುಟುಂಬಗಳ ನೆರವಿಗೂ ಸಿಪಿಐಎಂ ಧಾವಿಸಲಿದೆ ಎಂದು ಸಿಪಿಐಎಂ ಕಾರ್ಯದರ್ಶಿ ಯು.ಬಸವರಾಜ ತಿಳಿಸಿದ್ದಾರೆ.

ಇದನ್ನು ಓದಿ : ತಲ್ವಾರ್ ಹಿಡಿದು ರೌಡಿಗಳ ಅಟ್ಟಹಾಸ

ವಾಹನ ತಡೆದ ಪೊಲೀಸ್ ಸಿಬ್ಬಂದಿಯನ್ನ ಬೋನೆಟ್ ಮೇಲೆ ಹೊತ್ತು ಸಾಗಿದ ಚಾಲಕ

ಅದಿರು ಕೇಸಿನಲ್ಲಿ ಶಾಸಕ ಸತೀಶ್ ಸೈಲ್ ಬಂಧನ