ದಾಂಡೇಲಿ : ಬಿರುಗಾಳಿ ಹಾಗೂ ಮಳೆಯಿಂದ ಹಾನಿಯಾಗಿದ್ದ ದಾಂಡೇಲಿ ವಿಭಾಗದ 110 ಕೆವಿ ಸೂಪಾ – ಅನಮೋಡ್ ವಿದ್ಯುತ್ ಮಾರ್ಗವನ್ನು ಹೆಸ್ಕಾಂ ನೆರವಿನೊಂದಿಗೆ ಕೆ.ಪಿ.ಟಿ.ಸಿ.ಎಲ್. ಸಿಬ್ಬಂದಿಗಳು ನೆರೆ ನೀರಲ್ಲಿ ತೆರಳಿ ದುರಸ್ತಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಸಾಕಷ್ಟು ಅನಾಹುತ ಸೃಷ್ಟಿಸಿದ್ದು,  ಮಳೆಯ ಜತೆಗೆ ಬೀಸುತ್ತಿರುವ ಜೋರು ಗಾಳಿಯಿಂದ ಬೃಹತ್  ಮರಗಳು ಧರೆಗುರುಳುತ್ತಿವೆ.

  ಜೋಯಿಡಾ ತಾಲೂಕಿನ ಅಸು ಗ್ರಾ.ಪಂ ವ್ಯಾಪ್ತಿಯ ಚಾಂದೇವಾಡಿ ಗ್ರಾಮದಲ್ಲಿ ವಿದ್ಯುತ್ ತಂತಿ ಮೇಲೆ ಬೃಹತ್ ಮರ ಉರುಳಿತ್ತು. ಇದರಿಂದ ಬಜಾರ್ ಕುಣಂಗ್, ಕ್ಯಾಸಲ್ ರಾಕ್, ಅಸು ಹಾಗೂ ಅಕೇತಿ ಗ್ರಾ.ಪಂ ವ್ಯಾಪ್ತಿಯ ಹತ್ತಾರು ಗ್ರಾಮಗಳಿಗೆ ಕಳೆದ ಮೂರು ದಿನಗಳಿಂದ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಈ ಬಗ್ಗೆ ಗ್ರಾಮಸ್ಥರು ಹೆಸ್ಕಾಂಗೆ ದೂರು ನೀಡಿದ್ದರು.

ಸ್ಥಳಕ್ಕೆ ಧಾವಿಸಿದ ಹೆಸ್ಕಾಂ ಮತ್ತು ಕೆ.ಪಿ.ಟಿ.ಸಿ.ಎಲ್. ಸಿಬ್ಬಂದಿಯವರು ದುರಸ್ತಿ ಕಾರ್ಯಕ್ಕೆ ಮುಂದಾದರೂ, ಮರ ಬಿದ್ದ ಚಾಂದೇವಾಡಿ ಗ್ರಾಮಕ್ಕೆ ತೆರಳಲು ಪಾಂಡ್ರಿ ನದಿಯ ನೆರೆ ನೀರು ಕಾರ್ಯಾಚರಣೆಗೆ ಅಡ್ಡಿ ಉಂಟು ಮಾಡಿತ್ತು. ಸೂಪಾ ಡ್ಯಾಂ ನೀರಿನ ಪ್ರಮುಖ ಮೂಲವಾದ ಪಾಂಡ್ರಿ ಹಳ್ಳದಿಂದ ಪ್ರತಿ ನಿತ್ಯ ಅಂದಾಜು 5000 ರಿಂದ 6000 ಕ್ಯೂಸೆಕ್ ನೀರು ಹರಿವು ಇದೆ. ಇದರಿಂದಾಗಿ ಪಾಂಡ್ರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿ, ನೆರೆ ಸೃಷ್ಟಿಯಾಗಿದೆ. ಗ್ರಾಮಕ್ಕೆ ತೆರಳುವ ಸೇತುವೆ ಸಹ ನೀರಿನಲ್ಲಿ ಮುಳುಗಿರುವುದರಿಂದ ಚಾಂದೇವಾಡಿ ಗ್ರಾಮಕ್ಕೆ ತೆರಳಿ ವಿದ್ಯುತ್ ದುರಸ್ತಿ ಮಾಡುವುದು ಕಷ್ಟವಾಗಿತ್ತು.

ರೀವರ್  ರ‍್ಯಾಫ್ಟಿಂಗ್‌ ತಂಡದ ನೆರವು:  ಮರ ಬಿದ್ದ ದಿನದಿಂದಲೇ ದುರಸ್ತಿ ಕಾರ್ಯಕ್ಕೆ ಸಿದ್ಧವಾಗಿದ್ದ ಹೆಸ್ಕಾಂ ಮತ್ತು ಕೆ.ಪಿ.ಟಿ.ಸಿ. ಎಲ್. ಸಿಬ್ಬಂದಿಗಳು ಈಜು ಪಟುಗಳ ಸಹಾಯದಿಂದ ಗ್ರಾಮಕ್ಕೆ ತೆರಳಲು ಪ್ರಯತ್ನಿಸಿದ್ದರು. ಆದರೆ, ನೀರಿನ ಪ್ರಮಾಣ ಹೆಚ್ಚಿದ್ದರಿಂದ ಅದು ಸಾಧ್ಯವಾಗಲಿಲ್ಲ. ಕೊನೆಗೆ ಗ್ರಾಮಸ್ಥರ ಹಾಗೂ ರೀವರ್  ರ‍್ಯಾಫ್ಟಿಂಗ್‌ ತಂಡದ ಸಹಾಯದಿಂದ ಒಟ್ಟು 13 ಜನ ಹೆಸ್ಕಾಂ ಸಿಬ್ಬಂದಿ ಹಾಗೂ 6 ಜನ ರೀವರ್  ರ‍್ಯಾಫ್ಟಿಂಗ್ ತಂಡದ ಸದಸ್ಯರು ಸೇರಿ ಸುಮಾರು 600 ಮೀಟರ್‌ನಷ್ಟು ಬೋಟ್‌ನಲ್ಲಿ ತೆರಳಿ ವಿದ್ಯುತ್ ದುರಸ್ತಿ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿ, ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ.

ಸ್ವತಃ ಜ್ಯೂನಿಯರ್ ಎಂಜನಿಯರ್ ಜೈಹಿರುದ್ದೀನ್ ರೋಣ ಅವರು ಬೋಟ್ ಏರಿ ದುರಸ್ತಿ ಮಾಡಿದ್ದಾರೆ. ಇವರಿಗೆ ಹೆಸ್ಕಾಂ ಕಾರ್ಯನಿರ್ವಾಹಕ ಎಂಜನಿಯರ್ ಪುರುಷೋತ್ತಮ ಮಲ್ಯ ಅವರು ಬೋಟ್ ಸೇರಿದಂತೆ ಇನ್ನಿತರೆ ಸಹಾಯ ಮಾಡಿದ್ದಾರೆ.  ಗ್ರಾಮಸ್ಥರು ಹಾಗೂ ರೀವರ್  ರ‍್ಯಾಫ್ಟಿಂಗ್‌ ತಂಡದವರು ಒಟ್ಟುಗೂಡಿ ಕತ್ತಲೆಯಲ್ಲಿದ್ದ ಗ್ರಾಮಗಳಿಗೆ ಬೆಳಕು ನೀಡಲು ಶ್ರಮಿಸಿದ್ದಾರೆ. ಹೆಸ್ಕಾಂ ಮತ್ತು ಕೆ.ಪಿ.ಟಿ.ಸಿ.ಎಲ್ ಸಿಬ್ಬಂದಿಯವರ ಈ ಕಾರ್ಯವೈಖರಿಗೆ ಗ್ರಾಮಸ್ಥರು ಧನ್ಯವಾದಗಳನ್ನು ತಿಳಿಸಿದ್ದಾರೆ.