ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ (Karwar) : ನಗರದ ರಾಷ್ಟ್ರೀಯ ಹೆದ್ದಾರಿ  66ರಲ್ಲಿರುವ ಹಳೆಯ ಕಾಳಿ ಸೇತುವೆ(Kali Bridge) ಅವಶೇಷಗಳನ್ನ ತೆರವುಗೊಳಿಸುವ ವೇಳೆ ಸ್ಲಾಬ್ ಎದ್ದು ನಿಂತ ಘಟನೆ ಶುಕ್ರವಾರ ಸಂಭವಿಸಿದೆ.

ಇದರಿಂದ ಹೊಸ ಸೇತುವೆ ಮೇಲೆ ಸಂಚರಿಸುವ ವಾಹನ ಸವಾರರು, ಪ್ರಯಾಣಿಕರು ಅತಂಕಕ್ಕಿಡಾಗಿದ್ದಾರೆ. ಕಳೆದ ವರ್ಷ ಆಗಸ್ಟ್ ಏಳರಂದು ಕಾರವಾರದ ನಾಲ್ಕು ದಶಕಗಳ ಕಾಳಿ ಸೇತುವೆ ಕುಸಿದು ಬಿದ್ದಿತ್ತು. ಅದೃಷ್ಟವಶಾತ್ ಯಾರಿಗೂ ಏನು ಅಪಾಯವಾಗಿರಲಿಲ್ಲ. ಕುಸಿದ ಹಳೆ ಸೇತುವೆ ತೆರವುಗೊಳಿಸಲು ಸಂಬಂಧಪಟ್ಟ ಐ ಆರ್ ಬಿ ಕಂಪನಿ(IRB Company) ಮುಂದಾಗಿತ್ತು.

ಮುಂಬೈನಿಂದ  ಕಟ್ಟಡ ಒಡೆಯುವ ಬಾರೀ ಯಂತ್ರಗಳ ನೆರವಿನಿಂದ  ಸೇತುವೆಯ ಭಾಗವನ್ನು ತೆರವುಗೊಳಿಸುವ ಕೆಲಸ ನಡೆದಿತ್ತು. ಅವಶೇಷಗಳ ತೆರವಿಗೆ ಕ್ರೇನ್ ಸಹಿತ ಬಾರ್ಜ್ ಸೇರಿ ಅತ್ಯಾಧುನಿಕ ಯಂತ್ರೋಪಕರಣಗಳ ಮೂಲಕ ಕೆಲಸ ಮುಂದುವರಿದಿತ್ತು. ಇದ್ದಕ್ಕಿದ್ದಂತೆ ಇಂದು ನಡು ಭಾಗದಲ್ಲಿ ಬೆಳಿಗ್ಗೆ ತೆರವುಗೊಳಿಸುತ್ತಿರುವ ಸೇತುವೆಯ ಸ್ಲಾಬ್ ಎದ್ದು ನಿಂತುಬಿಟ್ಟಿದೆ. ಈಗಿರುವ ಹೊಸ ಸೇತುವೆಗಿಂತ ಮೇಲಕ್ಕೆ ಅದರ ಗಾತ್ರ ಆವರಿಸಿದೆ.  ಒಂದು ವೇಳೆ ಕೊಂಚ ತಿರುಗಿದರೇ ಹೊಸ ಸೇತುವೆಗೆ ಧಕ್ಕೆ ಆಗುವ ಸಾಧ್ಯತೆಯಿತ್ತು

ಇದರಿಂದ ಈ ಭಾಗದಲ್ಲಿ ಓಡಾಡುವ ವಾಹನ ಸವಾರರು ಆತಂಕದಿಂದ ಓಡಾಡುವಂತಾಗಿದೆ. ಅಲ್ಲದೇ ಕಾರ್ಮಿಕರ ಸುರಕ್ಷತೆಯು ಪ್ರಮುಖವಾಗಿದೆ. ಸೇತುವೆಯ ಅವಶೇಷ ತೆರವುಗೊಳಿಸಲು ಕಾರ್ಮಿಕರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ಕಾರ್ಮಿಕರು ಇರುವ ಸಂದರ್ಭದಲ್ಲಿ ಏನಾದರೂ ಅನಾಹುತ ಆಗಿದ್ದರೆ ಕಾಳಿ ಸೇತುವೆ ಮತ್ತೆ ದೊಡ್ಡ ಸುದ್ದಿಯಾಗುತಿತ್ತು.

ಇಲ್ಲಿರುವ ದೇವರೇ ಎರಡನೇ ಬಾರೀ ಕಾಪಾಡಿದ್ದಾನೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಹೀಗಾಗಿ ಸಂಬಂಧಪಟ್ಟವರು ಕಾರ್ಮಿಕರ ಸುರಕ್ಷತೆ ಕಡೆ ಗಮನ ಹರಿಸಬೇಕೆಂದು ನಾಗರಿಕರು ಒತ್ತಾಯಿಸುತ್ತಾರೆ.