ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar) : ತಾಲೂಕಿನ ಕುಗ್ರಾಮದಲ್ಲಿ ಇದ್ದ ರಸ್ತೆ ಸಮಸ್ಯೆಯೊಂದನ್ನ ಶಿಕ್ಷಕರೊಬ್ಬರ ಸಹಾಯದಿಂದ ಗ್ರಾಮದ ನಾಗರಿಕರು ಸರಿಪಡಿಸಿಕೊಂಡಿದ್ದಾರೆ.
ನಗೆ ಗ್ರಾಮವು(Nage Village) ಅನೇಕ ಮಜರೆಗಳಿಂದ ಕೂಡಿದ್ದು, ಸುತ್ತಲೂ ದಟ್ಟವಾದ ಅರಣ್ಯ ಪ್ರದೇಶ ಗುಡ್ಡಗಾಡು ಪ್ರದೇಶ. ಅದರ ಮಧ್ಯದಲ್ಲಿ ಪುಟ್ಟ ಪುಟ್ಟ ಮನೆಗಳಿಂದ ಹಾಗೂ ಸುತ್ತಲೂ ಪರಿಸರದ ಮರಗಿಡಗಳಿಂದ ಆವೃತ್ತವಾಗಿರುವ ಪುಟ್ಟ ಗ್ರಾಮ. ಈ ಗ್ರಾಮದಲ್ಲಿ ಶಾಲಾ ಮಕ್ಕಳಿಗಾಗಿ ಹಿರಿಯ ಪ್ರಾಥಮಿಕ ಶಾಲೆಯು (Higher Primary School) 1964ರಿಂದ ಪ್ರಾರಂಭವಾಗಿದ್ದು, ಇಲ್ಲಿ ಶ್ರೀ ಉದ್ಭವಲಿಂಗ ದೇವಸ್ಥಾನ ತನ್ನ ಹಿರಿಮೆಯನ್ನು ಕಾಯ್ದುಕೊಂಡು ಪ್ರತಿ ವರ್ಷವೂ ಸಾರ್ವಜನಿಕರಿಗೆ ಜಾತ್ರಾ ಮಹೋತ್ಸವದೊಂದಿಗೆ ಆನಂದವನ್ನು ಉಣಬಡಿಸುತ್ತಿದೆ.
ಈ ಗ್ರಾಮದ ಕೋಳಿಮಂಕೆ(Kolimanke) ಮಜರೆಯ ಶಾಲಾ ಮಕ್ಕಳು ಮಳೆಗಾಲದಲ್ಲಿ ಶಾಲೆಗೆ ಬರುವಾಗ ನಗೆ(Nage) ಹಾಗೂ ಮಚ್ಚಳ್ಳಿ(Machhalli) ಗುಡ್ಡದಿಂದ ಬರುವ ನೀರು ರಭಸವಾಗಿ ಹರಿದು ಶಾಲಾ ಮಕ್ಕಳಿಗೆ ಹಳ್ಳ ದಾಟಿ ಬರುವ ಪರಿಸ್ಥಿತಿ ಇತ್ತು. ಇದನ್ನು ಮನಗಂಡು ಕೋಳಿ ಮಂಕೆಯ ನಾಗರಿಕರು ಮುಖ್ಯ ಶಿಕ್ಷಕ ಅಖ್ತರ ಜೆ. ಸೈಯದ್ ಅವರ ಹತ್ತಿರ ರಸ್ತೆ ನಿರ್ಮಾಣಕ್ಕಾಗಿ ನಾವುಗಳು ಶ್ರಮದಾನ ಮಾಡಿ ಪೈಪ್ನ್ನು ಅಳವಡಿಸಿಕೊಳ್ಳುತ್ತೇವೆ. ನಮಗೆ ಶಾಲೆ ವತಿಯಿಂದ ಬೇಕಾಗುವ ಮಣ್ಣನ್ನು ಪೂರೈಸಿ ಎಂದು ಕೇಳಿ ಕೊಂಡಿದ್ದರು. ಮಕ್ಕಳ ಶಾಶ್ವತ ರಸ್ತೆ ಪರಿಹಾರಕ್ಕಾಗಿ ಮುಖ್ಯಾಧ್ಯಾಪಕ ಅಖ್ತರ ಜೆ. ಸೈಯದ್ ಅವರು ತಮ್ಮ ಸ್ವಂತ ಖರ್ಚಿನಿಂದ ಇಪ್ಪತ್ತು ಲೋಡ್ ಮಣ್ಣನ್ನು ಹಾಗೂ ಜೆಸಿಬಿಯನ್ನು ನೀಡುವ ಮೂಲಕ ಊರವರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಕೋಳಿಮಂಕಿ ಮಜರೆಯ ಹಾಗೂ ಗ್ರಾಮಸ್ಥರ ಶ್ರಮದಾನದಿಂದ ರಸ್ತೆ ನಿರ್ಮಾಣ ಮಾಡಿದ್ದು ಶ್ಲಾಘನೀಯವಾಗಿದೆ.
ಇದರಲ್ಲಿ ಶಾಲಾ ಆಡಳಿತ ಮಂಡಳಿ ಹಾಗೂ ಎಸ್ಡಿಎಂಸಿ ಸಹಕಾರ ಇದೆ. ಹಾಗೆಯೇ ಮುಖ್ಯ ಶಿಕ್ಷಕರಾದ ಅಖ್ತರ ಜೆ. ಸೈಯದ್ ಅವರು ನಗೆ ಗ್ರಾಮದ ಶ್ರೀ ಉದ್ಭವಲಿಂಗ ದೇವಸ್ಥಾನದ(Udbhavalinga Temple) ಆವರಣದಲ್ಲಿ ಸುಮಾರು 40 ರಿಂದ 50 ಲಾರಿ ಮಣ್ಣನ್ನು ಹಾಕಿ ದೇವಸ್ಥಾನದ ಆವರಣವನ್ನು ತಮ್ಮ ಸ್ವಂತ ಖರ್ಚಿನಿಂದ ಸಮತಟ್ಟು ಮಾಡಿದ್ದಾರೆ. ದೇವರ ಬಗ್ಗೆ ವಿಶೇಷ ಕಾಳಜಿ ಮುಖ್ಯ ಶಿಕ್ಷಕರಲ್ಲಿ ಕಂಡುಬರುತ್ತದೆ. ಹಾಗೆಯೇ ಅಖ್ತರ ಜೆ. ಸೈಯದ್ ಅವರು ಶಾಲೆಯಲ್ಲಿ ಓದುತ್ತಿರುವ ಪ್ರತಿ ಮಕ್ಕಳ ಮನೆಗೆ ಪರಿಸರದ ಕಾಳಜಿಯನ್ನು ಮತ್ತು ಗಿಡ ನೆಟ್ಟು ಬೆಳೆಸುವ ಕೌಶಲ್ಯವನ್ನು ವೃದ್ಧಿಸಲು ಮನೆಗೆ ಒಂದು ಲಾರಿ ಕೆಂಪು ಮಣ್ಣನ್ನು ನೀಡಿ ಪ್ರೋತ್ಸಾಹಿಸಿದ್ದಾರೆ. ಅಂತೆಯೇ ನಗೆ ಗ್ರಾಮದ ಸುಗ್ಗಿ ಕೋಲು ಕುಣಿಯುವ ದೇವಸ್ಥಾನಕ್ಕೂ ಹಾಗೂ ಬಲಿದೇವರ ಕಟ್ಟೆಗೂ ಶಾಲೆಯಿಂದ ತಮ್ಮ ಸ್ವಂತ ಖರ್ಚಿನಿಂದ ಲಾರಿ ಹಾಗೂ ಜೆಸಿಬಿ ಮುಖಾಂತರ ಮಣ್ಣನ್ನು ಹಾಕಿಕೊಟ್ಟು ಸಮತಟ್ಟು ಮಾಡಲು ಸಹಕರಿಸಿದ್ದಾರೆ.
ಇದು ಶಿಕ್ಷಕರಲ್ಲಿರುವ ಗ್ರಾಮಾಭಿಮಾನ ಎತ್ತಿ ತೋರಿಸುತ್ತದೆ. ಕೋಳಿಮಂಕೆಯ ಮಜರೆಯ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರಾದ ರಾಮಾ ಗೋರಖ್ಯಾ ಗೌಡ ಶಾಲಾ ಮಕ್ಕಳೊಂದಿಗೆ ತಮ್ಮ ಸಂತಸವನ್ನು ಹಂಚಿಕೊಂಡರು ಹಾಗೂ ಈ ಎಲ್ಲಾ ಕಾಮಗಾರಿಗಳಿಗೆ ಸುಮಾರು ಒಂದು ಲಕ್ಷ ರೂಪಾಯಿಯನ್ನು ತಮ್ಮ ಸ್ವಂತ ಖರ್ಚಿನಿಂದ ಭರಿಸಿರುವ ಮುಖ್ಯ ಶಿಕ್ಷಕ ಅಖ್ತರ ಸೈಯದ್ ಅವರಿಗೆ ರಾಮಾ ಗೋರಖ್ಯಾ ಗೌಡ ಅವರು ಅಭಿನಂದಿಸಿದ್ದಾರೆ.
ಇದನ್ನು ಓದಿ : ಭಟ್ಕಳದಲ್ಲಿ ಜೈ ಭೀಮ್ ಯುವ ಸೇನೆ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ.