ಜೋಯಿಡಾ: ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿ (BELAGAVI-GOA NATIONAL HIGHWAY) (ಎನ್‌ಎಚ್ 748) ರಾಮನಗರ ಬಳಿಯ ಅಸ್ತೋಲಿ ಸೇತುವೆಯ ಮೇಲೆ‌ ರಸ್ತೆಯಲ್ಲಿ ಹೊಂಡಗುಂಡಿಗಳು ಬಿದ್ದಿವೆ. ಆಡಳಿತದ ಕಳಪೆ ಕಾಮಗಾರಿ ಎಂದು  ಮೋರ್ಯ ಮಿತ್ರ ಮಂಡಳ ಮತ್ತು ಮಣಿಕಾಂತ ಸೇವಾ ಸಂಘದ ಕಾರ್ಯಕರ್ತರು  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆಯ ಹೊಂಡದಲ್ಲಿ ಗಿಡ ನೆಟ್ಟು, ಕೆಲಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದಾರೆ. ರಸ್ತೆಯ ಕಾಮಗಾರಿಗೆ ಸರಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.

    ಕಳೆದ ಎಂಟು ವರ್ಷಗಳಿಂದ ಈ ಹೆದ್ದಾರಿ ಕಾಮಗಾರಿ (HIGHWAY WORK) ನಡೆಯುತ್ತಿದ್ದು, ರಾಮನಗರದಿಂದ ಅನಮೋಡವರೆಗಿನ ರಸ್ತೆ ಕಾಮಗಾರಿ ಆಮೆ ಗತಿಯಲ್ಲಿ ನಡೆಯುತ್ತಿದೆ. ಮಳೆಗಾಲದಲ್ಲಿ ರಸ್ತೆಯಲ್ಲಿ ಸುಗಮ ಸಂಚಾರ ಮಾಡಲು ಕೆಲವು ಕಡೆಗಳಲ್ಲಿ ಡಾಂಬರೀಕರಣ ಮಾಡಲಾಗಿದೆ. ಆದರೆ ಮೊದಲ ಮಳೆಯಲ್ಲೇ ರಸ್ತೆಯಲ್ಲಿದ್ದ ಡಾಂಬರು ಸಂಪೂರ್ಣವಾಗಿ ಕಿತ್ತುಹೋಗಿದ್ದು, ಅಲ್ಲಲ್ಲಿ ದೊಡ್ಡ ದೊಡ್ಡ ಹೊಂಡಗಳು ಬಿದ್ದಿವೆ. ದ್ವಿಚಕ್ರ ವಾಹನಗಳು ಹಾಗೂ ದೊಡ್ಡ ವಾಹನಗಳು ಈ ಹೊಂಡಗಳಲ್ಲಿ ಕೆಲವೊಮ್ಮೆ ಸಿಲುಕಿಕೊಳ್ಳುತ್ತಿವೆ. ಅಪಘಾತಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೇಂದ್ರ ಸಂಚಾರ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸ್ಪಷ್ಟ ನಿರ್ಲಕ್ಷ್ಯದಿಂದ ಈ ರಸ್ತೆಯ ನಿರ್ವಹಣೆ ಮಾಡುವವರೇ ಇಲ್ಲದ ಕಾರಣ ಈ ರಸ್ತೆ  ಇಂತಹ ದುಸ್ಥಿತಿಗೆ ತಲುಪಿದೆ ಎಂದು ಈ ಸಂದರ್ಭದಲ್ಲಿ ಆರೋಪಿಸಿದರು.

  ಆದಷ್ಟು ಬೇಗ ರಸ್ತೆ ಪೂರ್ಣಗೊಳಿಸಲು ಕೇಂದ್ರ ಸರಕಾರ ಗಮನಹರಿಸಬೇಕು ಎಂದು ಮೋರ್ಯ ಮಿತ್ರ ಮಂಡಳ ಮತ್ತು ಮಣಿಕಾಂತ ಸೇವಾ ಸಂಘದ ಕಾರ್ಯಕರ್ತರು ಆಗ್ರಹಿಸಿದ್ದಾರೆ.   ಈ ಸಂದರ್ಭದಲ್ಲಿ ಮಹೇಶ ನಾಯ್ಕ, ಪರಶುರಾಮ ದೇಸಾಯಿ, ಮಯೂರ ಗಾಂಧಲೆ, ಜ್ಞಾನೇಶ್ವರ ದೇಸಾಯಿ, ಓಂಕಾರ ಗಾವಡೆ, ಸುಶಾಂತ ಹರಿಜನ, ಸ್ಥಳೀಯರು ಹಾಗೂ ಪ್ರಯಾಣಿಕರು ಉಪಸ್ಥಿತರಿದ್ದರು.