ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar): ಚಿರಪರಿಚಿತರಾಗಿರುವ, ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಗಿದ್ದ ಕಾರವಾರದ ಗಣಪತಿ ಹೊಳೆಗದ್ದೆ(73) ಅವರು ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಗುರುವಾರ ಸಂಜೆ ನಗರದ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಸಭೆಯೊಂದರಲ್ಲಿ ಭಾಗವಹಿಸಲು ಮುಂದಾದಾಗ ದೇವಸ್ಥಾನದ ಆವರಣದಲ್ಲಿ ಹೃದಯಾಘಾತಕ್ಕೊಳಗಾದರು. ಸ್ಥಳದಲ್ಲಿದ್ದವರು ಅವರನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ.
ಸುಮಾರು ಐದು ದಶಕಗಳಿಂದ ಜಿಲ್ಲಾ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದ ಇವರು ಮಾಜಿ ಸಂಸದ ದೇವರಾಯ ನಾಯ್ಕ, ಪ್ರಭಾಕರ ರಾಣೆ ಅವರ ಆತ್ಮೀಯರಾಗಿದ್ದು, ಅವರೊಂದಿಗೆ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು.
ಪರಮ ದೈವ ಭಕ್ತರಾಗಿದ್ದ ಗಣಪತಿ ಅವರು ಕುಮಟಾ ತಾಲೂಕಿನ ಹೊಳೆಗದ್ದೆಯಲ್ಲಿ ತಮ್ಮ ಕುಟುಂಬಕ್ಕೆ ಸೇರಿದ್ದ ದೇವಸ್ಥಾನದ ಬಂಡಿ ಹಬ್ಬದ ಉಸ್ತುವಾರಿ ವಹಿಸಿಕೊಳ್ಳುತ್ತಿದ್ದರು. ಮೇ ಮೊದಲ ವಾರ ಈ ವರ್ಷ ನಡೆಯುವ ಬಂಡಿ ಹಬ್ಬದ ತಯಾರಿ ನಡೆಸಿಕೊಂಡಿದ್ದರು. ಬಂಡಿ ಹಬ್ಬದ ದೇವರ ಕಳಸ ಹೊರುವ ಜವಾಬ್ದಾರಿ ಕೊನೆ ಎಂದು ಅವರು ಆತ್ಮೀಯರಲ್ಲಿ ಹೇಳಿಕೊಂಡಿದ್ದರು.
ಸಾಮಾಜಿಕ, ಸಾಂಸ್ಕೃತಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರು ನಾಟಕ, ಯಕ್ಷಗಾನ ಪ್ರೇಮಿಗಳಾಗಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿ, ಸೊಸೆ, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ. ಶುಕ್ರವಾರ ಅವರ ಸ್ವಗೃಹದಲ್ಲಿ ಅಂತಿಮ ವಿಧಾನಗಳನ್ನ ನಡೆಸಿ ಅಂತ್ಯಕ್ರಿಯೆ ನಡೆಸಲಾಯಿತು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಬಂಧು ಬಳಗದವರು, ಆತ್ಮೀಯರು ಪಾಲ್ಗೊಂಡಿದ್ದರು. ಅವರ ನಿಧನಕ್ಕೆ ಇ ಸಮಾಚಾರ ಡಿಜಿಟಲ್ ನ್ಯೂಸ್ ಸಂತಾಪ ಸೂಚಿಸುತ್ತದೆ.
ಇದನ್ನು ಓದಿ : ಉತ್ತರಕನ್ನಡ ಜಿಲ್ಲೆಯಲ್ಲಿರುವ ಎಲ್ಲಾ ಪಾಕಿಸ್ತಾನಿಗಳು ಲಾಂಗ್ ಟರ್ಮ್ ವೀಸಾದಲ್ಲಿದ್ದವರು: ಎಸ್ಪಿ ಎಂ ನಾರಾಯಣ್.
ಪಾಕಿಸ್ಥಾನಿ ನಾಗರಿಕರೇ ದೇಶ ಬಿಟ್ಟು ತೊಲಗಿ. ಖಡಕ್ ಸೂಚನೆ ಕೊಟ್ಟ ಕೇಂದ್ರ ಸರ್ಕಾರ.