ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಬನವಾಸಿ(Banavasi): ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ನೂತನ ವಿದ್ಯುತ್ ಗ್ರಿಡ್(Electricity Grid)  ಸಮಸ್ಯೆ ನಿವಾರಿಸುವಂತೆ  ಆಗ್ರಹಿಸಿ  ರೈತರು(Farmers) ಹಾಗೂ ವಿದ್ಯುತ್ ಬಳಕೆದಾರರು (Consumers) ಪಟ್ಟಣ  ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ಬುಧವಾರ ಪಟ್ಟಣದ ಪಂಪ ವೃತ್ತದಲ್ಲಿ ನೆರೆದ ಸಾವಿರಾರು ರೈತರು, ಅಂಗಡಿಕಾರರು, ಸಾರ್ವಜನಿಕರು ಬನವಾಸಿ(Banavasi) ಪಟ್ಟಣವನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದರು.  ಹೆಸ್ಕಾಂ (Hescom) ವಿರುದ್ದ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು. 

ಪ್ರತಿಭಟನೆಯಲ್ಲಿ ಮಾತನಾಡಿದ  ರೈತ ಮುಖಂಡ ಶಿವಕುಮಾರ್ ದೇಸಾಯಿ ಗೌಡ, ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದೇ ರೈತರು ಬೆಳೆದ ಬೆಳೆಗೆ ನೀರಿಲ್ಲದೇ  ಬೆಳೆ,  ತೋಟ ಒಣಗುತ್ತಿದೆ . ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಕಡಿಮೆ ವೋಲ್ಟೇಜ್ ನಿಂದಾಗಿ  ಪ್ರತಿನಿತ್ಯ ತೊಂದರೆ ಅನುಭವಿಸುವಂತಾಗಿದೆ. ಬನವಾಸಿಯಲ್ಲಿ ನೂತನವಾಗಿ ಸ್ಥಾಪನೆಯಾಗಲಿರುವ ವಿದ್ಯುತ್ ಸರಬರಾಜು ಕೇಂದ್ರಕ್ಕೆ ಉಂಟಾಗಿರುವ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಬೇಕು. ಗ್ರೀಡ್ ಕಾಮಗಾರಿಗೆ  ತೊಂದರೆ ನೀಡುತ್ತಿರುವ ಅರಣ್ಯ ಇಲಾಖೆಯ ಎಲ್ಲ  ಕಛೇರಿಗಳಿಗೆ ಈ ಕೂಡಲೇ ವಿದ್ಯುತ್ ಸರಬರಾಜು ನಿಲ್ಲಿಸಬೇಕು. ನಮ್ಮ ಭಾಗದ ರೈತರು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಹೋರಾಟ ವಿಕೋಪಕ್ಕೆ ಸಾಗುವ ಮುನ್ನ ಸಮಸ್ಯೆಯನ್ನು ಪರಿಹರಿಸಬೇಕು. ಬನವಾಸಿಗರಿಗೆ ಕದಂಬೋತ್ಸವದ ಅಗತ್ಯವಿಲ್ಲ ಇದರ ಬದಲಾಗಿ ಬನವಾಸಿ ಅಭಿವೃದ್ಧಿಗೆ ಒತ್ತು ನೀಡಿ, ನಮಗೆ ಮುಂಬರುವ ಏ.12 ಮತ್ತು ಏ.13ರೊಳಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದೇ ಇದ್ದಲ್ಲಿ ಬನವಾಸಿಯಲ್ಲಿ ನಡೆಯುವ ಕದಂಬೋತ್ಸವ ಕಾರ್ಯಕ್ರಮದಲ್ಲಿ ಕಪ್ಪುಬಟ್ಟೆ ಪ್ರದರ್ಶಿಸಿ ಕದಂಬೋತ್ಸವವನ್ನು  ಕರಾಳ ಉತ್ಸವವೆಂದು ಘೋಷಿಸಿ ಅಂದು  ಪ್ರತಿಭಟನೆ  ಮಾಡಲಾಗುವುದು ಎಂದರು. ಮುಂದಾಗುವ  ಅನಾಹುತಗಳಿಗೆ ರಾಜ್ಯ ಸರ್ಕಾರ ನೇರ ಹೊಣೆ ಎಂದು ಎಚ್ಚರಿಸಿದರು.

ಡಿಎಸ್ಎಸ್ ಮುಖಂಡ ಶಿವಾಜಿ ಕಾಳೇರಮನೆ ಮಾತನಾಡಿ, ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮದ ಸಾರ್ವಜನಿಕರಿಗೆ, ಉದ್ಯಮದಾರರಿಗೆ,  ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದೇ ಇರುವುದರಿಂದ ತೀವ್ರ ತೊಂದರೆಯಾಗುತ್ತಿದೆ. ಈ ಸಮಸ್ಯೆಗೆ ಇಲ್ಲಿನ ಶಾಖಾಧಿಕಾರಿಯೇ ನೇರ ಹೊಣೆಯಾಗಿದ್ದಾರೆ. ಇಲ್ಲಿಯ ಹೆಸ್ಕಾಂನ  ಶಾಖಾಧಿಕಾರಿಯು ಲೈನ್ ಮ್ಯಾನ್ ಹುದ್ದೆಗೆ ಸಹ ಪ್ರಯೋಜಕನಲ್ಲ. ಇಂತಹ ಬೇಜಾವಾಬ್ದಾರಿ ಶಾಖಾ ಅಧಿಕಾರಿಯನ್ನು ಎರಡು ದಿನಗಳಲ್ಲಿ ವರ್ಗಾವಣೆ ಮಾಡಬೇಕು. ಇಲ್ಲವಾದರೆ ಸಾರ್ವಜನಿಕರು ಹೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತೇವೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ದಂಡಾಧಿಕಾರಿ ಶೈಲೇಶ್ ಪರಮಾನಂದ ಮನವಿ  ಸ್ವೀಕರಿಸಿ ಮಾತನಾಡಿ, ತಮ್ಮ ಮನವಿಯನ್ನು ಮೇಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು. ವಿದ್ಯುತ್ ಸಮಸ್ಯೆ ಕುರಿತು ಹೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರ ವಿನಯ ರಾಚೋಟಿ ಮಾತನಾಡಿ, ವಿದ್ಯುತ್ ಸರಬರಾಜು ಕೇಂದ್ರ ಪ್ರಾರಂಭವಾದಲ್ಲಿ ಮಾತ್ರ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಿದೆ ಎಂದರು.

ಕೆಪಿಟಿಸಿಎಲ್ ನ ಕಾರ್ಯನಿರ್ವಾಹಕ ಅಭಿಯಂತರ ವಿ.ಸುನೀಲ್ ಕುಮಾರ್ ಮಾತನಾಡಿ, ವಿದ್ಯುತ್ ಉಪಕೇಂದ್ರಕ್ಕೆ ಬರುವ 10 ಕಂಬಗಳಲ್ಲಿ 6 ಕಂಬಗಳ ಕಾರ್ಯ ಪೂರ್ಣಗೊಂಡಿದೆ. ಉಳಿದ 4 ಕಂಬ ಹಾಕುವ ಜಾಗದಲ್ಲಿ ತಕರಾರು ಉಂಟಾಗಿ ಪ್ರಕರಣ ಹೈಕೋರ್ಟ್ ನಲ್ಲಿದೆ. ಇನ್ನೂ ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದರು.

   ಹೆಸ್ಕಾಂ ಅಧೀಕ್ಷಕ ಅಭಿಯಂತರ ಪುರುಷೋತ್ತಮ ಮಲ್ಯ,  ಸಾಮಾಜಿಕ ಕಾರ್ಯಕರ್ತ ಜಯಶೀಲ ಗೌಡ, ರೈತ ಮುಖಂಡರಾದ ಗಜಾನನ ಗೌಡ, ವೀರೇಂದ್ರ ಗೌಡ, ವಿನಯ ಗೌಡ, ವೀರಭದ್ರ ಗೌಡ,  ವಿಶ್ವನಾಥ ಹಾದಿಮನಿ, ಶಾಂತಲಾ ಕಾನಳ್ಳಿ, ವಿ.ಜಿ.ನಾಯ್ಕ್ ಮತ್ತಿತರರು ಮಾತನಾಡಿದರು.

ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು, ಅಂಗಡಿಕಾರರು, ಉದ್ಯಮದಾರರು ಭಾಗವಹಿಸಿದ್ದರು.

ಇದನ್ನು ಓದಿ : ಹೆಜ್ಜೇನು ದಾಳಿ. ದಿಕ್ಕಾ ಪಾಲಾಗಿ ಓಡಿದ ಜನ. ಮೂವರಿಗೆ ಗಾಯ

ಹುತಾತ್ಮ ಯೋಧನ ಕುಟುಂಬಕ್ಕೆ ಭಟ್ಕಳ ತಾಲೂಕು ಮಾಜಿ ಸೈನಿಕರ ಸಂಘ ಸಹಾಯ.

ಕಾಳಿ ಹಳೆ ಸೇತುವೆ ತೆರವುಗೊಳಿಸುವ ವೇಳೆ ಘಟನೆ.