ಉಡುಪಿ : ಬೇಟೆಯಾಡಲು ಬಂದ ಕರಿ ಚಿರತೆ ಬಾವಿಗೆ ಬಿದ್ದ ಘಟನೆ ಕುಂದಾಪುರ ತಾಲೂಕಿನ ಮಂದರ್ತಿ ಸಮೀಪ ನಡೆದಿದೆ.
ಮಂದರ್ತಿಯ ಶಿರೂರು ಹೆಮ್ಮಣಿಕೆಯ ಶೇಖರ್ ಶೆಟ್ಟಿ ಎಂಬುವವರ ರಬ್ಬರ್ ತೋಟದ ಸಮೀಪ ಇರುವ ಕೃಷ್ಣ ನಾಯ್ಕರ ಜಮೀನಿನಲ್ಲಿರುವ ತೆರೆದ ಬಾವಿಯಲ್ಲಿ ಚಿರತೆ ಬಿದ್ದಿದೆ.
ನಿನ್ನೆ ಸಂಜೆ ಬಾವಿಯಲ್ಲಿ ಶಬ್ದವಾಗುತ್ತಿರೋದನ್ನ ಗಮನಿಸಿದ ಶೇಖರ್ ಶೆಟ್ಟಿ ಹತ್ತಿರ ಹೋಗಿ ನೋಡಿದಾಗ ಕಪ್ಪು ಬಣ್ಣದ ಪ್ರಾಣಿ ಇರೋದು ಗೊತ್ತಾಗಿದೆ. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬಾವಿ ಸುತ್ತ ಬಲೆ ಹಾಕಿ ಕರಿ ಚಿರತೆ ರಕ್ಷಣಾ ಕಾರ್ಯಾಚರಣೆ ನಡೆಸಿದರು.
ಆದರೆ ಚಿರತೆ ಸೆರೆ ಹಿಡಿಯುವ ಸಂದರ್ಭದಲ್ಲಿ ಚಿರತೆ ಬಲೆಯಿಂದ ಸರಿದು ಸಮೀಪದ ತೋಟದೊಳಕ್ಕೆ ಓಡಿ ಅರಣ್ಯ ಸೇರಿಕೊಂಡಿದೆ.
ಡಿಎಪ್ಓ ಗಣಪತಿ ಮಾರ್ಗದರ್ಶನದಲ್ಲಿ ಎಸಿಎಪ್ ಪ್ರಕಾಶ್ ಪೂಜಾರಿ, ಶಂಕರ ನಾರಾಯಣ, ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ, ಉಪವಲಯ ಅರಣ್ಯಾಧಿಕಾರಿ ನಾಗರಾಜ ಮತ್ತು ಸಿಬ್ಬಂದಿಗಳು ಈ ಸಂದರ್ಭದಲ್ಲಿ ಇದ್ದರು.