ಭಟ್ಕಳ(BHATKAL) : ಶಿಕ್ಷಕ, ಸಾಹಿತಿ ಮತ್ತು ಕವಿಯೂ ಆಗಿರುವ ಶಿರಾಲಿಯ ಶ್ರೀಧರ ಶೇಟ್ ರಚಿಸಿದ ಮಕ್ಕಳ ಕವಿತೆಯನ್ನು ಐಸಿಎಸ್ಇ (ICSE)ಮತ್ತು ಸಿಬಿಎಸ್ಇ(CBSE) ಪಠ್ಯ ಪುಸ್ತಕದಲ್ಲಿ ಅಳವಡಿಸಿಕೊಳ್ಳಲಾಗಿದೆ.
ಆಂಗ್ಲ ಮಾಧ್ಯಮದ ದ್ವಿತೀಯ ಮತ್ತು ತೃತೀಯ ಭಾಷೆ ಕನ್ನಡದ ಪಠ್ಯಪುಸ್ತಕದಲ್ಲಿ ಇವರ ಹೆಸರಾಂತ “ಬೇಲಿಯ ಹೂವು” ಕವಿತೆಯನ್ನು ಬಳಸಿಕೊಳ್ಳಲಾಗಿದೆ.
ನವದೆಹಲಿಯ ಮಾಡರ್ನ್ ಪಬ್ಲಿಷರ್ಸ್ (NEWDELHI MODERN PUBLISHERS) ರವರು ಈ ವರ್ಷ “ಕನ್ನಡ ಚಂದನ’ (KANNANDA CHANDANA) ಹೆಸರಿನಲ್ಲಿ ಕನ್ನಡ ಪಠ್ಯ ಪುಸ್ತಕ ಸರಣಿಯನ್ನು ಪ್ರಕಾಶನ ಮಾಡಿದ್ದಾರೆ. ಈ ಸರಣಿಯ ಐದನೇ ತರಗತಿಯ ಪಠ್ಯ ಪುಸ್ತಕದಲ್ಲಿರುವ ಈ ಕವಿತೆಯನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಲಿದ್ದಾರೆ. ಯಾವುದೇ ಗೊಬ್ಬರ, ನೀರು, ವಿಶೇಷ ಆರೈಕೆಯಿಲ್ಲದೆ ಬೆಳೆಯುವ ಬೇಲಿಯ ಹೂವು ತನ್ನ ಸ್ವ ಸಾಮರ್ಥ್ಯದಿಂದ ಅರಳಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಅದೇ ರೀತಿ ನಮ್ಮ ಸಮಾಜದಲ್ಲಿ ಹಲವರು ಯಾರ ಕೃಪಾಶೀರ್ವಾದವಿಲ್ಲದೆ ಬೆಳೆದು ಸಾಧನೆ ಮಾಡುವ ಸಂದೇಶ ಈ ಕವಿತೆಯಲ್ಲಿ ಅಡಗಿದೆ.
ಶ್ರೀಧರ ಶೇಟ್ ರವರು ಸದ್ಯ ಭಟ್ಕಳ ತಾಲೂಕಿನ ಜಾಲಿಯ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯ ಮಟ್ಟದ ಹಲವು ಸಾಹಿತ್ಯಕ ಪ್ರಶಸ್ತಿಗಳಿಂದ ಪುರಸ್ಕೃತರಾಗಿರುವ ಇವರು ಭಟ್ಕಳ ತಾಲೂಕ ಒಂಭತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದರು. ಕಳೆದ ವರ್ಷ ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಇವರ ಹಲವು ಕಥೆ, ಕವನ, ಲೇಖನ, ವ್ಯಂಗ್ಯ ಚಿತ್ರಗಳು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿರುವುದನ್ನು ಇಲ್ಲಿ ಸ್ಮರಿಸಬಹುದು. ಇವರು ಅಂಕಣಕಾರರೂ, ಚಿತ್ರ ಕಲಾವಿದರೂ ಮತ್ತು ಉತ್ತಮ ಕಾರ್ಯಕ್ರಮ ನಿರೂಪಕರಾಗಿಯೂ ಪ್ರಸಿದ್ಧಿಯನ್ನು ಪಡೆದಿರುತ್ತಾರೆ.
ಇದನ್ನು ಓದಿ : ಎಂ ಜಿ ರಸ್ತೆಯಲ್ಲಿ ಕಸ ಸ್ವಚ್ಛಗೊಳಿಸಿದ ನ್ಯಾಯಧೀಶರು
ಭಟ್ಕಳದಲ್ಲಿ ಅಪರಿಚಿತ ಮೃತದೇಹ ಪತ್ತೆ. ಪೊಲೀಸರ ದೌಡು