ದಾಂಡೇಲಿ(DANDELI) : ಬೊಮ್ಮನಹಳ್ಳಿ ಡ್ಯಾಮ್(BOMNALLI DAM) ಹತ್ತಿರ ದ್ವೀಪದಲ್ಲಿ ಜಲ ದಿಗ್ಬಂಧನಕ್ಕೆ ಸಿಲುಕಿದ ವ್ಯಕ್ತಿಯನ್ನು  ರಕ್ಷಣೆ ಮಾಡಿದ ಘಟನೆ ನಡೆದಿದೆ.

ಸೂಪಾ ಜಲಾಶಯ(SIPA DAM) ಮತ್ತು ಬೊಮ್ಮನಹಳ್ಳಿ ಜಲಾಶಯದಿಂದ ನೀರು ಬಿಟ್ಟ ಹಿನ್ನೆಲೆಯಲ್ಲಿ ಕಾಳಿ ನದಿಯಲ್ಲಿ  ನೀರಿನ ಪ್ರಮಾಣ ಏರಿಕೆಯಾಗಿತ್ತು. ನೀರು ಬಿಡುವ ಬಗ್ಗೆ ಕೆಪಿಸಿ(KPC) ಮುನ್ನೆಚ್ಚರಿಕೆಯನ್ನು ನೀಡಿತ್ತು.  ಆದರೆ ಇದನ್ನು ಗಮನಿಸದ ಸ್ಥಳೀಯ ನಿವಾಸಿ ಜನ್ನು ಗಾವಡೆ ಎಂಬುವವರು ಬೊಮ್ಮನಹಳ್ಳಿ ಹತ್ತಿರ ನದಿಯ ಮಧ್ಯೆ ಇರುವ ದ್ವೀಪದಲ್ಲಿ ಎಮ್ಮೆಗಳನ್ನು ಮೇಯಿಸಲು ಹೋಗಿದ್ದರು. ಆದರೆ ಜಲಾಶಯದಿಂದ ನೀರು ಹೊರ ಬಿಟ್ಟಿರುವ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನದಿಂದ ಕಾಳಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿತ್ತು. ಜನ್ನು ಗಾವಡೆ ಅವರಿಗೆ ಅಲ್ಲಿಂದ ಬರಲಾಗದೆ ನಡುಗಡ್ಡೆಯಲ್ಲೇ ಉಳಿಯುವಂತಾಯಿತು. ಜನ್ನು ಗಾವಡೆ ಅವರು ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಡಿದರೂ ಸಿಗಲಿಲ್ಲ.  ನದಿಯ ನಡುಗಡ್ಡೆಯಲ್ಲಿ  ಅವರು ಜಲ ದಿಗ್ಬಂಧನಕ್ಕೆ ಒಳಗಾಗಿರೋದು ಗೊತ್ತಾಯಿತು.

ಈ ಬಗ್ಗೆ  ಅಂಬಿಕಾನಗರ(AMBIKANAGAR) ಕೆಪಿಸಿ ಅಧಿಕಾರಿಗಳು ಮತ್ತು ದಾಂಡೇಲಿಯ ತಹಶೀಲ್ದಾರ್ ಶೈಲೇಶ ಪರಮಾನಂದ ಅವರು  ಪ್ರವಾಸೋದ್ಯಮಿ ಹಾಗೂ ಮಾನಸಾ ಅಡ್ವೆಂಚರ್ಸಿನ ಮಾಲಕರಾದ ಉಮೇಶ್ ಜಿ. ಅವರನ್ನು ಸಂಪರ್ಕಿಸಿ ರಾಪ್ಟ್ ಹಾಗೂ ತಜ್ಞ ಈಜುಗಾರರನ್ನು ಕಳುಹಿಸಿ ಕೊಡುವಂತೆ ವಿನಂತಿಸಿದ್ದರು.

ಮಾಹಿತಿಯನ್ನು ಪಡೆದುಕೊಂಡ  ಉಮೇಶ್ ಜಿ. ಈ ಅವರು  2 ರಾಪ್ಟ್ ಮತ್ತು ಹತ್ತು ಜನ ನುರಿತ ಈಜುಗಾರರನ್ನು ಸ್ಥಳಕ್ಕೆ ಕಳುಹಿಸಿಕೊಟ್ಟರು.  ನಸುಕಿನ ವೇಳೆ 2 ಗಂಟೆಗೆ ಜನ್ನು ಗಾವಡೆಯವರ ರಕ್ಷಣೆ ಕಾರ್ಯವನ್ನು ಆರಂಭಿಸಲಾಯಿತು. ನೀರಿನ ರಭಸದ ನಡುವೆಯೂ ಮಾನಸಾ ಅಡ್ವೆಂಚರ್ಸಿನ ಸೋಮಶೇಖರ್ ಜಿ. ಈ ಮತ್ತು ಕಾರ್ತಿಕ್ ಉಮೇಶ ಜಿ.ಈ ಅವರ ನೇತೃತ್ವದಲ್ಲಿ ಮಾ‌ನಸಾ ಅಡ್ವೆಂಚರ್ಸ್ ಸಿಬ್ವಂದಿಗಳಾದ ಆದರ್ಶ್, ಸಂತೋಷ್, ಬಾಬು, ಸಂಜು, ಮಂಜು, ದೀಪಕ್,
ಚೇತನ್, ಅಗ್ನೀಶ್, ಬಸವರಾಜ್ ಅವರ ತಂಡ ನೀರಿನ ರಭಸವನ್ನು ಲೆಕ್ಕಿಸದೆ ನಡುಗೆಡ್ಡೆಗೆ ತೆರಳಿ ಜನ್ನು ಗಾವಡೆ ಅವರನ್ನು ಬುಧವಾರ ನಸುಕಿನ ಸುರಕ್ಷಿತವಾಗಿ  ನದಿ ದಡಕ್ಕೆ ಕರೆ ತಂದಿದ್ದಾರೆ.

ಈ ಸಂದರ್ಭದಲ್ಲಿ ಅಂಬಿಕಾನಗರ ಕೆಪಿಸಿಯ ಅಧಿಕಾರಿಗಳು, ಸಿಬ್ಬಂದಿಗಳು, ಅಂಬಿಕಾ ನಗರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಸ್ಥಳೀಯ ಸಾರ್ವಜನಿಕರು ಮತ್ತು ಜನ್ನು ಗಾವಡೆ ಅವರ ಕುಟುಂಬಸ್ಥರು ಉಪಸ್ಥಿತರಿದ್ದು, ಮಾನಸಾ ಅಡ್ವೆಂಚರ್ಸಿನ ಸಾಹಸಿ ಯುವಕರ ತಂಡಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.

ಇದನ್ನು ಓದಿ : ದೋಣಿ ಮಗುಚಿ ಮೀನುಗಾರ ನಾಪತ್ತೆ

ಅತ್ತೆ ಮಾಡಿಸಿಕೊಟ್ಟ ಫ್ಯಾನ್ಸಿ ಸ್ಟೋರ್

ಜಿಲ್ಲೆಯಲ್ಲಿ NIA ದಾಳಿ